ಬಂಗಾಳ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಮಮತಾ ಬ್ಯಾನರ್ಜಿ; ಬಿಜೆಪಿ ಮುಂದಿರುವ ಕಾನೂನು ಆಯ್ಕೆಗಳೇನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡಿರುವ ಟಿಎಂಸಿ, ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಸೋಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲವಾಗಿದೆ. ಖುದ್ದು ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ. ಬಿಜೆಒಇ ಮತ್ತು ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ 100ಕ್ಕೂ ಹೆಚ್ಚು ಸ್ಥಾನಗಳನ್ನು ಲೂಟಿ ಮಾಡಿದೆ ಎಂಬುದು ಮಮತಾ ಅವರ ಗಂಭೀರ ಆರೋಪ. ಹಾಗಿದ್ದರೆ ಚುನಾವಣೆಯಲ್ಲಿ ಸೋತ ಮುಖ್ಯಮಂತ್ರಿ ರಾಜೀನಾಮೆ ನೀಡದಿದ್ದರೆ ಏನಾಗುತ್ತದೆ? ಇಲ್ಲಿದೆ ಮಾಹಿತಿ.
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೋತ ಒಂದು ದಿನದ ನಂತರ, ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಚುನಾವಣೆಗಳು ನ್ಯಾಯಯುತವಾಗಿರಲಿಲ್ಲವಾದ್ದರಿಂದ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಘೋಷಿಸಿದ್ದಾರೆ.
“ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಚುನಾವಣಾ ಆಯೋಗ ಒಟ್ಟಿಗೆ ಸೇರಿ ಸಮಾರು 100 ಸ್ಥಾನಗಳನ್ನು ಲೂಟಿ ಮಾಡಿದೆ” ಎಂದು ಗಂಭೀರ ಆರೋಪ ಮಾಡಿರುವ ಮಮತಾ ಬ್ಯಾನರ್ಜಿ, ಅಕ್ರಮ ಪ್ರಶ್ನಿಸಿದ್ದಕ್ಕೆ ತಮ್ಮ ಮೇಲೆ ಹಲ್ಲೆ ಮಾಡಿ ಮತಗಟ್ಟೆಯಿಂದ ಹೊರಹಾಕಿದ್ದಾರೆ ಎಂದೂ ಬಾಂಬ್ ಸಿಡಿಸಿದ್ದಾರೆ. ಬಿಜೆಪಿ ವಿರುದ್ಧದ ಮಮತಾ ಬ್ಯಾನರ್ಜಿ ಆರೋಪಗಳು ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿವೆ.
“ನಾವು ಸೋತಿಲ್ಲ. ನಾನು ರಾಜೀನಾಮೆ ನೀಡುವುದಿಲ್ಲ. ನಾನು ರಾಜಭವನಕ್ಕೆ ಭೇಟಿ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ” ಎಂದು ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಮತಾ ಬ್ಯಾನರ್ಜಿ ಘೋಷಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಸದಸ್ಯರಾದ ಡೆರೆಕ್ ಒ’ಬ್ರಿಯನ್ ಮತ್ತು ಅಭಿಷೇಕ್ ಬ್ಯಾನರ್ಜಿ ಉಪಸ್ಥಿತರಿದ್ದರು.
ಸಂಪ್ರದಾಯದ ಪ್ರಕಾರ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ, ನಿರ್ಗಮಿತ ಸಿಎಂ ರಾಜ್ಯಪಾಲರಿಗೆ ತಮ್ಮ ರಾಜೀನಾಮೆಯನ್ನು ಸಲ್ಲಿಸಲು ರಾಜಭವನಕ್ಕೆ ತೆರಳಬೇಕಾಗುತ್ತದೆ. ಆದರೆ ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.
“ಪ್ರಧಾಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡಿದ್ದಾರೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಈ ಚುನಾವಣೆಯ ಖಳನಾಯಕ. ಟಿಎಂಸಿ ಸತ್ಯಶೋಧನಾ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈ ಕರಿತು ಪಕ್ಷದೊಳಗೆ ಚರ್ಚೆ ನಡೆಸಿದ ಬಳಿಕ ಮುಂದಿನ ಕ್ರಮಗಳನ್ನು ನಿರ್ಧರಿಸಲಾಗುತ್ತದೆ” ಎಂದು ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ಕಾನೂನು ತೊಡಕುಗಳೇನು?
ಯಾವುದೇ ರಾಜ್ಯದ ವಿಧಾನಸಭಾ ಚುನಾವಣೆಯ ನಂತರ, ಹಾಲಿ ಮುಖ್ಯಮಂತ್ರಿ ರಾಜೀನಾಮೆ ನೀಡಲು ನಿರಾಕರಿಸಿದರೆ ಏನಾಗುತ್ತದೆ? ಎಂಬ ಪ್ರಶ್ನೆ ಈಗ ಸಹಜವಾಗಿ ಉದ್ಭವಿಸಿದೆ. ಈ ಬಗ್ಗೆ ಸಂವಿಧಾನದ 164ನೇ ವಿಧಿ ಏನು ಹೇಳುತ್ತದೆ? ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ. ಈ ವಿಧಿಯ ಪ್ರಕಾರ “ಮುಖ್ಯಮಂತ್ರಿಯನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ ಮತ್ತು ಇತರ ಮಂತ್ರಿಗಳನ್ನು ಮುಖ್ಯಮಂತ್ರಿಯ ಸಲಹೆಯ ಮೇರೆಗೆ ರಾಜ್ಯಪಾಲರು ನೇಮಕ ಮಾಡುತ್ತಾರೆ ಮತ್ತು ಸಚಿವರು ರಾಜ್ಯಪಾಲರ ಇಚ್ಛೆಯ ಸಮಯದವರೆಗೆ ಹುದ್ದೆಯಲ್ಲಿರುತ್ತಾರೆ” ಎಂದು ಹೇಳುತ್ತದೆ.
ಹೀಗಾಗಿ, ತಾಂತ್ರಿಕವಾಗಿ, ರಾಜ್ಯದ ರಾಜ್ಯಪಾಲರು ಮುಖ್ಯಮಂತ್ರಿಯನ್ನು ವಜಾಗೊಳಿಸಬಹುದು. ಆದಾಗ್ಯೂ ಇದು ಅನಿಯಂತ್ರಿತ ವ್ಯಾಯಾಮವಾಗದಂತೆ ವಿವಿಧ ಸುರಕ್ಷತಾ ಕ್ರಮಗಳು ಜಾರಿಯಲ್ಲಿವೆ. ಸುಪ್ರೀಂಕೋರ್ಟ್ ತೀರ್ಪುಗಳ ಒಂದು ಸಾಲು, “ರಾಜ್ಯಪಾಲರ ಅಧಿಕಾರವು ಪ್ರಾಥಮಿಕವಾಗಿ ಮಂತ್ರಿ ಮಂಡಳಿಯ ಸಹಾಯ ಮತ್ತು ಸಲಹೆಗೆ ಸಿಮೀತವಾಗಿರುತ್ತದೆ” ಎಂದು ವ್ಯಾಖ್ಯಾನಿಸಿದೆ.
ರಾಜ್ಯಪಾಲರು ಒಬ್ಬ ಮುಖ್ಯಮಂತ್ರಿಯನ್ನು ರಾಜೀನಾಮೆ ನೀಡಲು ಕೇಳಿದರೆ ಮತ್ತು ವಿಧಾನಸಭೆಯ ಅಧಿಕಾರಾವಧಿ ಇರುವಾಗಲೇ ಆ ಹುದ್ದೆಗೆ ಮತ್ತೊಬ್ಬ ಅಭ್ಯರ್ಥಿಯನ್ನು ಆಹ್ವಾನಿಸಲು ಬಯಸಿದರೆ, ಸರ್ಕಾರ ಸದನದಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸಲು ಪ್ರಯತ್ನಿಸುವ ವಿಶ್ವಾಸಮತ ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ಒಂದು ವೇಳೆ ಸ್ಥಿರ ಸರ್ಕಾರ ರಚನೆಯಾಗದಿದ್ದರೆ, ಕೊನೆಯ ಅಸ್ತ್ರವಾಗಿ ಆರ್ಟಿಕಲ್ 356ನ್ನು ಬಳಸಿ ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ಶಿಫಾರಸ್ಸು ಮಾಡಬಹುದು. ಈ ಸಂದರ್ಭದಲ್ಲಿ ಮಮತಾ ರಾಜೀನಾಮೆ ನೀಡಲು ನಿರಾಕರಿಸಿದರೆ, ರಾಜ್ಯಪಾಲರು ಅವರ ರಾಜೀನಾಮೆಯನ್ನು ಕೇಳಬಹುದು.
ರಾಜ್ಯ ವಿಧಾನಸಭೆಯ ಅಧಿಕಾರಾವಧಿ:
ಸಂವಿಧಾನದ 172ನೇ ವಿಧಿಯು, “ಪ್ರತಿಯೊಂದು ರಾಜ್ಯದ ಪ್ರತಿಯೊಂದು ವಿಧಾನಸಭೆಯು, ಬೇಗನೆ ವಿಸರ್ಜಿಸಲ್ಪಡದ ಹೊರತು, ಅದರ ಮೊದಲ ಸಭೆಗೆ ನೇಮಿಸಲಾದ ದಿನಾಂಕದಿಂದ ಐದು ವರ್ಷಗಳವರೆಗೆ ಮುಂದುವರಿಯುತ್ತದೆ. ಐದು ವರ್ಷಗಳ ಅವಧಿಯ ಮುಕ್ತಾಯವು ವಿಧಾನಸಭೆಯ ವಿಸರ್ಜನೆಯಾಗಿ ಕಾರ್ಯನಿರ್ವಹಿಸುತ್ತದೆ” ಎಂದು ಹೇಳುತ್ತದೆ.
ಚುನಾವಣಾ ಆಯೋಗದ ಪ್ರಕಾರ ಪ್ರಸ್ತುತ ಬಂಗಾಳ ವಿಧಾನಸಭೆಯ ಅಧಿಕಾರಾವಧಿಯು ಮೇ 8, 2021 ರಂದು ಪ್ರಾರಂಭವಾಗಿದ್ದು, ಮೇ 7, 2026ರಂದು ಮುಕ್ತಾಯಗೊಳ್ಳುತ್ತದೆ. ಆ ದಿನಾಂಕದ ಬಳಿಕ ರಾಜ್ಯಪಾಲರು ಹೊಸ ವಿಧಾನಸಭೆಯನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕಾಗುತ್ತದೆ.
ಬಿಜೆಪಿ ಈಗ ಹೊಸ ಸರ್ಕಾರ ರಚನೆಗೆ ರಾಜ್ಯಪಾಲರನ್ನು ಭೇಟಿಯಾಗಲು ಸಮಯಾವಕಾಶ ಕೇಳಿದೆ. ರಾಜ್ಯಪಾಲರ ನಿರ್ಣಯದ ಆಧಾರದ ಮೇಲೆ, ಅದು ಮುಂದಿನ ಕಾನೂನು ಕ್ರಮಗಳ ಬಗ್ಗೆ ಚಿಂತಿಸಲಿದೆ.
ಮಮತಾ ಬ್ಯಾನರ್ಜಿ ಅವರ ಪಶ್ಚಿಮ ಬಂಗಾಳದಲ್ಲಿ ಸ್ಥಾನಗಳನ್ನು ಕದಿಯುವಿಕೆ ಆರೋಪಕ್ಕೆ ಧ್ವನಿಗೂಡಿಸಿರುವ ಲೋಕಸಭೆ ಪ್ರತಿಪಕ್ಷ ನಾಯಕ ಮತ್ತು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, “ಬಂಗಾಳದಲ್ಲಿ ಬಿಜೆಪಿ ಉದಯ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ” ಎಂದು ಬಣ್ಣಿಸಿದ್ದಾರೆ. ಒಟ್ಟಿನಲ್ಲಿ ಪಶ್ಚಿಮ ಬಂಗಾಳದಲ್ಲಿ ಇನ್ನೂ ಕೆಲವು ದಿನಗಳ ಕಾಲ ರಾಜಕೀಯ ಹೈಡ್ರಾಮಾ ನಡೆಯುವುದು ಶತಸಿದ್ಧ.



