ಮೋದಿ ಶುಭಾಶಯಕ್ಕೆ 1 ದಿನದ ಬಳಿಕ ದಳಪತಿ ವಿಜಯ್ ಕುತೂಹಲಕಾರಿ ಪ್ರತಿಕ್ರಿಯೆ; ಮೊದಲ ಟ್ವೀಟ್ನಲ್ಲೇ ಟಾಂಗ್!

ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಪ್ರಧಾನಿ ಮೋದಿ ಹಾಗೂ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ನಡುವಿನ ಟ್ವಿಟರ್ ಸಂವಾದ ಕುತೂಹಲ ಕೆರಳಿಸಿದೆ. ಮೋದಿಯವರ ವೈಯಕ್ತಿಕ ಖಾತೆಯ ಶುಭಾಶಯಕ್ಕೆ, ವಿಜಯ್ ಪ್ರಧಾನಿ ಅಧಿಕೃತ ಖಾತೆಯನ್ನು ಟ್ಯಾಗ್ ಮಾಡಿ ಪ್ರಬುದ್ಧವಾಗಿ ಉತ್ತರಿಸಿದ್ದಾರೆ. “ರಾಜಕೀಯ ಮೀರಿ ತಮಿಳುನಾಡಿನ ಅಭಿವೃದ್ಧಿಯೇ ನಮ್ಮ ಗುರಿ” ಎಂದಿರುವ ಅವರು, ಮೋದಿಯವರ ಬದಲು ‘ಕೇಂದ್ರ ಸರ್ಕಾರದ’ ಬೆಂಬಲ ಕೋರುವ ಮೂಲಕ ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ರಾಜಕೀಯ ತಂತ್ರಗಾರಿಕೆ ಪ್ರದರ್ಶಿಸಿದ್ದಾರೆ.
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ಬೆನ್ನಲ್ಲೆ ‘ತಮಿಳು ವೆಟ್ರಿ ಕಳಗಂ’ (ಟಿವಿಕೆ) ಪಕ್ಷಕ್ಕೆ ಶುಭಾಶಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ 1 ದಿನದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಕುತೂಹಲಕರ ಸಂಗತಿ, ರಾಜಕೀಯ ತಂತ್ರಗಾರಿಕೆ ಅಡಗಿದ್ದು, ಸದ್ಯ ಇಬ್ಬರ ಟ್ವೀಟ್ ವೈರಲ್ ಆಗಿದೆ.
ಸೋಮವಾರ ಸಂಜೆ ಟ್ವೀಟ್ ಮಾಡಿದ ನರೇಂದ್ರ ಮೋದಿಯವರು “ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟವನ್ನು ಬೆಂಬಲಿಸಿದ ತಮಿಳುನಾಡಿನ ಮತದಾರರಿಗೆ ಕೃತಜ್ಞತೆಗಳು. ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮತ್ತು ಅವರ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿರುತ್ತೇವೆ. ಚುನಾವಣೆಯಲ್ಲಿ ಪ್ರಭಾವಶಾಲಿ ಸಾಧನೆ ಮಾಡಿರುವ ಟಿವಿಕೆ ಪಕ್ಷಕ್ಕೆ ಅಭಿನಂದನೆಗಳು,” ಎಂದಿದ್ದರು. ಇಲ್ಲಿ ವಿಜಯ್ ಅವರ ಅಧಿಕೃತ ಖಾತೆಯನ್ನು ಮೋದಿಯವರು ಉಲ್ಲೇಖ ಮಾಡಿರಲಿಲ್ಲ. ಜತೆಗೆ ಪ್ರಧಾನಮಂತ್ರಿ ಅಧಿಕೃತ ಖಾತೆಯ ಬದಲಿಗೆ ತಮ್ಮ ವಯಕ್ತಿಕ ಖಾತೆಯಿಂದ ಶುಭ ಕೋರಿದ್ದರು. (ಟಿವಿಕೆ ಗೆಲುವಿನ ಮಾಸ್ಟರ್ ಮೈಂಡ್)
ಮಂಗಳವಾರ ಸಂಜೆ ನರೇಂದ್ರ ಮೋದಿಯವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ನಟ ವಿಜಯ್, “ಮಾನ್ಯ ಪ್ರಧಾನಮಂತ್ರಿಗಳೇ, ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು. ನಮ್ಮ ಜನರ ಯೋಗಕ್ಷೇಮವೇ ನಮ್ಮ ಏಕೈಕ ಗುರಿಯಾಗಿದೆ. ರಾಜಕೀಯವನ್ನು ಮೀರಿ, ನಾವು ರಾಜ್ಯದ ಪ್ರಗತಿ ಮತ್ತು ತಮಿಳುನಾಡಿನ ಜನರ ಕಲ್ಯಾಣದತ್ತ ಗಮನ ಹರಿಸಲಿದ್ದೇವೆ. ನಮ್ಮ ಈ ಪ್ರಯತ್ನದಲ್ಲಿ ಕೇಂದ್ರ ಸರ್ಕಾರದ ಬೆಂಬಲವನ್ನು ನಾವು ನಿರೀಕ್ಷಿಸುತ್ತೇವೆ,” ಎಂದು ಟ್ವೀಟ್ ಮಾಡಿದ್ದಾರೆ.
ರಾಜಕೀಯ ತಂತ್ರಗಾರಿಕೆ ಪ್ರದರ್ಶನ
ಮೋದಿಯವರ ಅಭಿನಂದನಾ ಸಂದೇಶಕ್ಕೆ ವಿಜಯ್ ಪ್ರಬುದ್ಧ ರಾಜಕಾರಣಿಯಂತೆ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಉಭಯ ನಾಯಕರ ಈ ಟ್ವಿಟರ್ ಸಂವಾದವು ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.
- ಮೊದಲಿಗೆ ನರೇಂದ್ರ ಮೋದಿಯವರ ಖಾತೆಯ ಬದಲು ಪ್ರಧಾನಮಂತ್ರಿಗಳ ಅಧಿಕೃತ ಖಾತೆಯನ್ನು ಟ್ಯಾಗ್ (ಉಲ್ಲೇಖ) ಮಾಡಿದ್ದಾರೆ. ಈ ಮೂಲಕ ವಿಜಯ್ ಅವರನ್ನು ಉಲ್ಲೇಖ ಮಾಡದೇ ಟಿವಿಕೆಗೆ ಶುಭಕೋರಿದ ಮೋದಿಯವರಿಗೆ ಟಾಂಗ್ ಕೊಟ್ಟಿದ್ದಾರೆ.
- ಎರಡನೇಯದ್ದಾಗಿ, ನಮ್ಮ ಜನರ ಯೋಗಕ್ಷೇಮವೇ ನಮ್ಮ ಏಕೈಕ ಗುರಿ ಎಂದು ನಾಡು, ನಾಡಿನ ಜನರನ್ನು ಉಲ್ಲೇಖಿಸಿ ಅಭಿವೃದ್ಧಿಪರ ಮಾತನಾಡಿದ್ದಾರೆ.
- ರಾಜಕೀಯವನ್ನು ಮೀರಿ ಪ್ರಗತಿಯತ್ತ ಗಮನ ಹರಿಸಲಿದ್ದೇವೆ ಎಂದು ನಿಮ್ಮ ರಾಜಕೀಯಕ್ಕೆ ನಮ್ಮ ಬಳಿ ಅವಕಾಶ ಇಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.
- ಕೊನೆಯದಾಗಿ, ಪ್ರಧಾನಿ ಮೋದಿಯವರ ಬೆಂಬಲ ಎನ್ನುವ ಬದಲು ಕೇಂದ್ರ ಸರ್ಕಾರದ ಬೆಂಬಲ ಎಂದು ಉಲ್ಲೇಖ ಮಾಡಿ ಒಕ್ಕೂಟ ವ್ಯವಸ್ಥೆ ನೆನಪಿಸಿ ಹಕ್ಕುಬದ್ಧ ಸಹಕಾರ ಕೋರಿದ್ದಾರೆ.



